
ಬೆಂಗಳೂರು: ಕರ್ನಾಟಕ ಗೃಹ ಮಂಡಳಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ವಸತಿ ಸಚಿವ ಜಮೀರ್ ಅಹ್ಮದ್ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಸಾಧನೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಮಂಡಳಿಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಜಮೀರ್ ಅಹ್ಮದ್ಖಾನ್, ಚಿಕ್ಕಜಾಲ ಇಂಟಿಗ್ರೇಟೆಡ್ ಟೌನ್ ಶಿಪ್ ಹಾಗೂ ಕುಂಬಳಗೋಡು ಉಪನಗರ ಯೋಜನೆ ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆ ಗರಂ ಆದರು. ಯೋಜನೆ ಅನುಷ್ಠಾನಕ್ಕೆ ಪ್ರತ್ಯೇಕ ಅಧಿಕಾರಿಗಳನ್ನು ನಿಯೋಜಿಸಿ ಮೂರು ತಿಂಗಳಲ್ಲಿ ಪ್ರಗತಿ ತೋರಿಸುವಂತೆ ನಿರ್ದೇಶನ ನೀಡಿದರು.
ಮಂಡಳಿ ಜಾಮೀನು ಸ್ವಾಧೀನ ಸೇರಿ ನ್ಯಾಯಾಲಯದಲ್ಲಿರುವ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳದ ಹಾಗೂ ಲಕ್ಷಾಂತರ ರೂ. ವ್ಯಯ ಆದರೂ ಒಂದೇ ಒಂದು ಪ್ರಕರಣ ಇತ್ಯರ್ಥವಾಗದ ಬಗ್ಗೆ ಕೋಪಗೊಂಡ ಸಚಿವರು, ಸಧ್ಯದಲ್ಲೇ ಅಡ್ವೋಕೆಟ್ ಜನರಲ್ ಜತೆ ಸಭೆ ನಿಗದಿ ಮಾಡುವುದಾಗಿ ತಿಳಿಸಿದರು.
ಗೃಹಮಂಡಳಿ ಮೂಲ ನಿವೇಶನ ಹರಾಜು ಹಾಕಿ ಸಂಪನ್ಮೂಲ ಸಂಗ್ರಹಕ್ಕೆ ಒತ್ತು ಕೊಡಬೇಕು. ಮೂರು ತಿಂಗಳಲ್ಲಿ ಒಂದು ಸಾವಿರ ಕೋಟಿ ರೂ. ಕ್ರೋಡಿಕರಿಸಿ ಹೊಸ ಬಡಾವಣೆ ನಿರ್ಮಿಸಲು ಜಮೀನು ಗುರುತಿಸಬೇಕು ಎಂದು ಸೂಚನೆ ನೀಡಿದರು.
ಗೃಹ ಮಂಡಳಿ ಅಧ್ಯಕ್ಷ ಶಿವಲಿಂಗೇ ಗೌಡರು ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಗೃಹ ಮಂಡಳಿ ನಿವೇಶನ ಗಳಿಗೆ ಬೇಡಿಕೆ ಇದ್ದು ಸೂಕ್ತ ರೀತಿಯಲ್ಲಿ ಹೊಸ ಬಡಾವಣೆ ರಚನೆಗೆ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಸಭೆಯಲ್ಲಿ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಆಯುಕ್ತರಾದ ಕವಿತಾ ಮಣ್ಣಿಕೇರಿ, ಪ್ರಧಾನ ಅಭಿಯಂತರ ಶರಣಪ್ಪ ಉಪಸ್ಥಿತರಿದ್ದರು.
Poll (Public Option)

Post a comment
Log in to write reviews