2024-09-19 05:06:11

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಗುಡ್ಡದ ಭೂತವಾದ ದೇವರ ನಾಡಿಗೆ ಇಂದು ಪ್ರಧಾನಿ ಮೋದಿ ಭೇಟಿ

ನವದೆಹಲಿ: ದಾರುಣ ಭೂಕುಸಿತ (Kerala Landslide) ಸಂಭವಿಸಿದ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲು, ಪರಿಹಾರ ಮತ್ತು ಪುನರ್ವಸತಿ ಪ್ರಯತ್ನಗಳ ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು (ಆಗಸ್ಟ್ 10) ಕೇರಳದ ವಯನಾಡ್ (Wayanad Landslide) ಜಿಲ್ಲೆಗೆ ಭೇಟಿ ನೀಡಲಿದ್ದಾರೆ.

ಪ್ರಧಾನಿ ಮೋದಿ ಭೂಕುಸಿತದ ಸಂತ್ರಸ್ತರನ್ನು ಆಸ್ಪತ್ರೆಗಳು ಮತ್ತು ಪರಿಹಾರ ಶಿಬಿರಗಳಲ್ಲಿ ಭೇಟಿ ಮಾಡಲಿದ್ದಾರೆ. ದುರಂತದಲ್ಲಿ ಸಂತ್ರಸ್ತರಾದವರಿಗೆ ಸರಿಯಾದ ಬೆಂಬಲ, ಪರಿಹಾರ ದೊರೆಯುವಿಕೆಯನ್ನು ಖಚಿತಪಡಿಸಿಕೊಳ್ಳಲಿದ್ದಾರೆ.

ವಯನಾಡ್‌ನ ಮಾಜಿ ಸಂಸದ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi), ಭೂಕುಸಿತ ಪ್ರದೇಶಕ್ಕೆ ಭೇಟಿ ನೀಡುತ್ತಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಭೇಟಿಯ ನಂತರ ಪ್ರಧಾನಿ ವಯನಾಡ್ ಭೂಕುಸಿತವನ್ನು ʼರಾಷ್ಟ್ರೀಯ ವಿಪತ್ತುʼ ಎಂದು ಘೋಷಿಸುತ್ತಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

“ಮೋದಿ ಜೀ, ಭೀಕರ ದುರಂತದ ಬಗ್ಗೆ ವೈಯಕ್ತಿಕವಾಗಿ ಅವಲೋಕನ ಮಾಡಲು ವಯನಾಡ್‌ಗೆ ಭೇಟಿ ನೀಡುತ್ತಿರುವುದಕ್ಕಾಗಿ ಧನ್ಯವಾದಗಳು. ಇದೊಂದು ಒಳ್ಳೆಯ ನಿರ್ಧಾರ. ಪ್ರಧಾನಿ ಒಮ್ಮೆ ವಿನಾಶದ ಪ್ರಮಾಣವನ್ನು ನೇರವಾಗಿ ನೋಡಿದ ನಂತರ, ಅವರು ಅದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುತ್ತಾರೆ ಎಂದು ನನಗೆ ವಿಶ್ವಾಸವಿದೆ” ಎಂದು ಗಾಂಧಿ ಶುಕ್ರವಾರ ರಾತ್ರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮೋದಿ ಭೇಟಿಯ ಪೂರ್ಣ ವೇಳಾಪಟ್ಟಿ ಇಲ್ಲಿದೆ

ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಕೇರಳದ ಕಣ್ಣೂರು ತಲುಪುವ ನಿರೀಕ್ಷೆಯಿದೆ. ಅಲ್ಲಿಂದ ಅವರು ವಯನಾಡಿನಲ್ಲಿ ಭೂಕುಸಿತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ಕೈಗೊಳ್ಳಲಿದ್ದಾರೆ. ನಂತರ, ಮಧ್ಯಾಹ್ನ 12:15ರ ಸುಮಾರಿಗೆ ಭೂಕುಸಿತದಿಂದ ಸಂತ್ರಸ್ತವಾಗಿರುವ ಸ್ಥಳಗಳಿಗೆ ನೇರ ಭೇಟಿ ನೀಡಲಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಸ್ಥಳಾಂತರ ಕಾರ್ಯಾಚರಣೆಗಳ ಕುರಿತು ರಕ್ಷಣಾ ತಂಡಗಳಿಂದ ವಿವರ ಪಡೆಯಲಿದ್ದಾರೆ. ಭೂಕುಸಿತದಿಂದ ಬದುಕುಳಿದವರು ಪ್ರಸ್ತುತ ಪುನರ್ವಸತಿ ಬಯಸುತ್ತಿರುವ ಪರಿಹಾರ ಶಿಬಿರ ಮತ್ತು ಆಸ್ಪತ್ರೆಗೆ ಪ್ರಧಾನಿ ಭೇಟಿ ನೀಡಲಿದ್ದಾರೆ. ಸಂತ್ರಸ್ತರೊಂದಿಗೆ ಸಂವಾದ ನಡೆಸಿ ಅವರ ಕುಂದುಕೊರತೆಗಳನ್ನು ಆಲಿಸಲಿದ್ದಾರೆ. ನಂತರ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅಲ್ಲಿನ ಪರಿಹಾರ ಪ್ರಯತ್ನಗಳ ಬಗ್ಗೆ ವಿವರವಾಗಿ ತಿಳಿಯಲಿದ್ದಾರೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Kearala CM Pinarayi Vijayan) ಅವರು ಈ ವಾರದ ಆರಂಭದಲ್ಲಿ ಮೋದಿ ಅವರ ವಯನಾಡ್ ಭೇಟಿಯನ್ನು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು. ಕೇಂದ್ರ ಸರ್ಕಾರ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

400ಕ್ಕೂ ಹೆಚ್ಚು ಸಾವು

ಜುಲೈ 30ರಂದು ವಯನಾಡಿನ ಚೂರಲ್ಮಲಾ ಮತ್ತು ಮುಂಡಕ್ಕೈನಲ್ಲಿ ಸಂಭವಿಸಿದ ಭಾರಿ ಭೂಕುಸಿತ ವ್ಯಾಪಕ ವಿನಾಶವನ್ನು ಸೃಷ್ಟಿಸಿದ್ದವು. ಭೂಕುಸಿತದಲ್ಲಿ 400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 150 ಜನರು ಇನ್ನೂ ನಾಪತ್ತೆಯಾಗಿದ್ದಾರೆ. ಪತ್ತೆಯಾದ ಮೃತದೇಹಗಳ ಡಿಎನ್‌ಎ ಫಲಿತಾಂಶದ ಬಳಿಕ ಅಂತಿಮ ಸಾವಿನ ಸಂಖ್ಯೆ ಖಚಿತವಾಗಲಿದೆ ಎಂದು ಸಿಎಂ ಹೇಳಿದ್ದಾರೆ.

Post a comment

No Reviews