2024-09-19 04:39:22

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ರಘು ತಾತಾ' ಟ್ರೇಲರ್ ಔಟ್​​

ದಕ್ಷಿಣ ಚಿತ್ರರಂಗದ ಬಹುಮುಖ ಪ್ರತಿಭೆಗಳಲ್ಲಿ ಒಬ್ಬರಾದ ಕೀರ್ತಿ ಸುರೇಶ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ರಘು ತಾತಾ'. ಸಿನಿಮಾವನ್ನು ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲಿ ಹಿಟ್​ ಚಿತ್ರಗಳನ್ನು ಕೊಡುತ್ತಾ ಬಂದಿರುವ ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾ ನಿರ್ಮಾಣ ಮಾಡಿರುವುದು ವಿಶೇಷ.

ಈ ಚಿತ್ರದ ಮೂಲಕ ಕೆಜಿಎಫ್​, ಕಾಂತಾರದಂತಹ ಸಿನಿಮಾಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್ ಕಾಲಿವುಡ್​ಗೆ ಕಾಲಿಟ್ಟಿದೆ. ಮಂಗಳಾವಾರ ನಿರ್ಮಾಪಕರು ಟ್ರೇಲರ್​ ಅನಾವರಣಗೊಳಿಸಿದ್ದು, ಪ್ರೇಕ್ಷಕರ ಕುತೂಹಲ ಮತ್ತಷ್ಟು ಹೆಚ್ಚುವಂತೆ ಮಾಡಿದೆ.

ಈವರೆಗೆ ಕೆಲ ಸಾಮಾಜಿಕ ಸಂದೇಶ ಅಥವಾ ಮಹಿಳಾ ಕೇಂದ್ರಿತ ಚಿತ್ರಗಳಲ್ಲಿ ಕೀರ್ತಿ ಸುರೇಶ್ ಕಾಣಿಸಿಕೊಂಡಿದ್ದಾರೆ. ಇದು ಕೂಡ ಅಂಥದ್ದೇ ಒಂದು ಸಿನಿಮಾ. ಆಗಸ್ಟ್ 15 ರಂದು ಚಿತ್ರಮಂದಿರ ಪ್ರವೇಶಿಸಲಿರುವ 'ರಘು ತಾತಾ' ಈಗಾಗಲೇ ಪ್ರಚಾರ ಪ್ರಾರಂಭಿಸಿದೆ. ಅದರ ಭಾಗವಾಗಿ ಇಂದು ಟ್ರೇಲರ್​​ ಬಿಡುಗಡೆ ಆಗಿದ್ದು, ಸುಮನ್​ ಕುಮಾರ್​​​ ನಿರ್ದೇಶನದ ಸಿನಿಮಾ ಸುತ್ತಲಿನ ಉತ್ಸಾಹ ದುಪ್ಪಟ್ಟಾಗಿದೆ.

ಎಂಟರ್​ಟೈನಿಂಗ್​​​ ಟ್ರೇಲರ್ ಹಂಚಿಕೊಂಡ ಹೊಂಬಾಳೆ ಫಿಲ್ಮ್ಸ್, "ಉತ್ಸಾಹ ಮತ್ತು ನಗುವನ್ನು ಹಿಡಿಯಿರಿ. ಹೊಸ ಟ್ವಿಸ್ಟ್‌ನೊಂದಿಗೆ ಮೋಜಿನಲ್ಲಿ ಮುಳುಗಿ. ನಿಮಗಾಗಿ ರಘು ತಾತಾ ಟ್ರೇಲರ್​​ ಅನ್ನು ಪ್ರಸ್ತುತಪಡಿಸಲಾಗುತ್ತಿದೆ" ಎಂದು ಬರೆದುಕೊಂಡಿದೆ. ಪ್ರತೀ ಫೇಮ್​ನಲ್ಲೂ ಕೀರ್ತಿ ಸುರೇಶ್ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಹಳ್ಳಿ ಹುಡುಗಿಯಾಗಿ ಮಿಂಚು ಹರಿಸಿದ್ದಾರೆ. ತಮ್ಮ ಸ್ಕ್ರೀನ್​ ಪ್ರೆಸೆನ್ಸ್, ಒನ್​ ಲೈನ್​ ಡೈಲಾಗ್ಸ್​​​ನಿಂದ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಾರೆ ಎಂಬುದು ಟ್ರೇಲರ್​ನಲ್ಲಿ ಬಹುತೇಕ ಖಚಿತವಾಗಿದೆ. ಫ್ಯಾಮಿಲಿ ಎಂಟರ್​ಟೈನರ್​​ ಸಿನಿಮಾ ವೀಕ್ಷಿಸುವ ಕಾತರದಲ್ಲಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿದ್ದಾರೆ.

ಇತ್ತೀಚೆಗೆ ಚಿತ್ರಕ್ಕೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್​​​ಸಿ​​) 'ಯು' ಪ್ರಮಾಣಪತ್ರವನ್ನು ನೀಡಿದ್ದು, ಇದನ್ನು ಚಿತ್ರ ತಯಾರಕರು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಿಬಿಎಫ್‌ಸಿ 'ಯು' (ಯುನಿವರ್ಸಲ್) ಸರ್ಟಿಫಿಕೇಟ್ ನೀಡಿದ್ದು, ಎಲ್ಲರಿಗೂ ಸೂಕ್ತವಾದ ಸಿನಿಮಾ ಇದಾಗಿದೆ. ಕೀರ್ತಿ ಸುರೇಶ್​​ ಅಸಾಧಾರಣ ಪಾತ್ರವನ್ನು ನಿರ್ವಹಿಸಿದ್ದಾರೆ. ಇಲ್ಲಿ ಹಿಂದಿ ಹೇರಿಕೆಯನ್ನು ಅವರು ಎದುರಿಸುತ್ತಾರೆ. ರಾಕಿಂಗ್​​​ ಸ್ಟಾರ್ ಯಶ್ ಅವರ ಬ್ಲಾಕ್​ಬಸ್ಟರ್ ಸಿನಿಮಾ 'ಕೆಜಿಎಫ್ ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿರುವ ಈ ಚಿತ್ರಕ್ಕೆ ಸುಮನ್ ಕುಮಾರ್ ಆ್ಯಕ್ಷನ್​ ಕಟ್​ ಹೇಳಿದ್ದಾರೆ.

ಚಿತ್ರದಲ್ಲಿ ಕೀರ್ತಿ ಸುರೇಶ್​​ ಜೊತೆಗೆ, ಎಂ.ಎಸ್ ಬಾಸ್ಕರ್, ರವೀಂದ್ರ ವಿಜಯ್, ದೇವದರ್ಶಿನಿ, ರಾಜೀವ್ ರವೀಂದ್ರನಾಥನ್ ಮತ್ತು ಜಯಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೀನ್ ರೋಲ್ಡನ್ ಸಂಗೀತ ಸಂಯೋಜಿಸಿದ್ದು, ಟಿ.ಎಸ್ ಸುರೇಶ್ ಮತ್ತು ಯಾಮಿನಿ ಯಜ್ಞಮೂರ್ತಿ ಸಂಕಲನ ಮತ್ತು ಛಾಯಾಗ್ರಹಣವನ್ನು ನಿರ್ವಹಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದು ಸಿನಿಮಾ ಬಿಡುಗಡೆ ಆಗಲಿದೆ. ತಂಗಲಾನ್, ಅಂಧಗನ್ ನಂತಹ ಚಿತ್ರಗಳ ಎದುರು ಪೈಪೋಟಿ ನಡೆಸಲಿದೆ.

Post a comment

No Reviews