2024-09-19 04:52:59

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಸ್ವಂತ ಖರ್ಚಿನಲ್ಲಿ ಭದ್ರಾ ನಾಲೆಗಳ ಹೂಳು ತೆಗೆಸಿದ ರೈತರು

ದಾವಣಗೆರೆ: ಚನ್ನಗಿರಿ ತಾಲೂಕಿನ ವೆಂಕಟೇಶ್ವರ ಕ್ಯಾಂಪ್‌ನ ರೈತರು ಸ್ವಂತ ಖರ್ಚಿನಲ್ಲಿ ಹೂಳು ತೆಗೆಸುವ ಕಾರ್ಯಕ್ಕೆ ಕೈಹಾಕಿದ್ದಾರೆ.

ಈ ಬಾರಿ ವರುಣನ ಕೃಪೆಯಿಂದ ಪಶ್ಚಿಮ ಘಟ್ಟಗಳಲ್ಲಿ ಉತ್ತಮ ಮಳೆಯಾಗಿರುವ ಪರಿಣಾಮ, ಭದ್ರಾ ನದಿ ಮೈದುಂಬಿ ಹರಿಯುತ್ತಿದ್ದು, ಜಲಾಶಯ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ರೈತರ ಬೆಳೆಗಳಿಗೆ ನೀರು ಒದಗಿಸಲು ಜಲಾಶಯದಿಂದ‌ ನಾಲೆಗಳಿಗೆ ನೀರು ಹರಿಸಲಾಗಿದೆ.‌ ವಿಪರ್ಯಾಸ ಎಂದರೆ ನಾಲೆಗಳಲ್ಲಿ ಹೂಳು ತುಂಬಿಕೊಂಡಿರುವುದರಿಂದ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ. ಇದರಿಂದ ಬೇಸತ್ತ ರೈತರು ಮತ್ತು ನೀರು ಬಳಕೆದಾರರ ಸಂಘದವರು ಸ್ವಂತ ಖರ್ಚಿನಲ್ಲಿಯೇ ನಾಲೆಗಳಲ್ಲಿನ ಹೂಳು ತೆಗೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಹೌದು, ಭದ್ರಾ ಜಲಾಶಯದಿಂದ ನಾಲೆಗೆ ನೀರು ಹರಿದು ಇಂದಿಗೆ ಹದಿಮೂರು ದಿನವಾಗಿದೆ. ಆದರೆ ಇದೂವರೆಗೂ ಕೊನೆ ಭಾಗಕ್ಕೆ ನೀರು ಹರಿದಿಲ್ಲ. ಭೀಮನೆರೆಯಿಂದ ಕಂದಗಲ್ಲು ಗ್ರಾಮದವರೆಗೆ 19 ಕಿ.ಮೀ ಉಪನಾಲೆ ಇದ್ದು ನಾಲೆಯ ತುಂಬೆಲ್ಲಾ ಹೂಳು ತುಂಬಿದೆ. ಇದರಿಂದಾಗಿ ಕೊನೆ ಭಾಗಕ್ಕೆ ನೀರು ಹರಿದಿಲ್ಲ. ನಾಲೆಯ ಹೂಳು ತೆಗೆಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿ ಚನ್ನಗಿರಿ ತಾಲೂಕಿನ ವೆಂಕಟೇಶ್ವರ ಕ್ಯಾಂಪ್​ನ ರೈತರು ಹಾಗೂ ನೀರು ಬಳಕೆದಾರರ ಸಂಘದವರು ಸೇರಿಕೊಂಡು ಸುಮಾರು ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ನಾಲೆಯ ಹೂಳು ತೆಗೆಸುವ ಕೆಲಸಕ್ಕೆ ಕೈ ಹಾಕಿದ್ದಾರೆ.

ಕಂದಗಲ್ಲು ಗ್ರಾಮದಲ್ಲಿ ಸುಮಾರು 2,500 ಎಕರೆ ಪ್ರದೇಶಕ್ಕೆ ಉಪನಾಲೆಯಿಂದ ನೀರು ಹರಿಯಲಿದೆ. ಅಷ್ಟೇ ಅಲ್ಲದೇ, 94 ಎಕರೆ ವಿಸ್ತೀರ್ಣದ ಕೆರೆಗೂ ನೀರು ತಲುಪಿಲ್ಲ. ಆದ್ದರಿಂದ ಕಂದಗಲ್ಲು ಗ್ರಾಮದ ರೈತರು ಭತ್ತ ನಾಟಿ ಮಾಡಲು ಮತ್ತು ತೋಟಗಳಿಗೆ ನೀರು ಬಳಸಲು ಸಾಧ್ಯವಾಗಿಲ್ಲ. ನಾಲೆಯ ಹೂಳು ತೆಗೆಸಲು ಅಧಿಕಾರಿಗಳನ್ನು ಕೇಳಿದರೆ ಅನುದಾನ ಇಲ್ಲಾ ಎಂದು ಹೇಳುತ್ತಿದ್ದಾರೆ. ಜನಪ್ರತಿನಿಧಿಗಳಿಗೆ ನಮ್ಮ ಗೋಳು ಕೇಳುತ್ತಿಲ್ಲ. ನಾಲೆಗಳಲ್ಲಿ ಹೂಳು ತುಂಬಿರುವ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನೀರಾವರಿ ಇಲಾಖೆಯ ಅಧಿಕಾರಿಗಳು ಹೂಳು ತೆಗೆಸಲು ಫಂಡ್ ಇಲ್ಲ ಎಂಬ ಸಬೂಬು ಹೇಳಿದ್ದರು. ಇದರಿಂದಾಗಿ ರೈತರ ಬಳಿ ಚಂದಾ ವಸೂಲಿ ಮಾಡುವುದರ ಜೊತೆಗೆ ಎರಡು ನೀರು ಬಳಕೆದಾರರ ಸಂಘಗಗಳು ಸೇರಿಕೊಂಡು ನಾಲೆಯ ಹೂಳು ತೆಗೆಸಲಾಗುತ್ತಿದೆ. ಎರಡು ಲಕ್ಷದ ವೆಚ್ಚದಲ್ಲಿ ಈ ಕೆಲಸಕ್ಕೆ ಕೈಹಾಕಿದ್ದೇವೆ. ಒಟ್ಟು ನಾಲೆ 19 ಕಿ.ಮೀ ಇದ್ದು, ನಾವು 15 ಕಿ.ಮೀ ಹೂಳನ್ನು ಎರಡು ಹಿಟಾಚಿ ಮೂಲಕ ತೆಗೆಸಲಾಗುತ್ತಿದೆ ಎಂದು ತಿಳಿಸಿದರು.

ನೀರು ಬಳಕೆದಾರರ ಸಂಘದ ಉಪಾಧ್ಯಕ್ಷ ಕಾಂತರಾಜ್ ಮಾತನಾಡಿ, ಹೂಳು ತೆಗೆಯಲು ಫಂಡ್ ಇಲ್ಲ, ನೀವೇ ಏನಾದರೂ ವ್ಯವಸ್ಥೆ ಮಾಡಿಕೊಳ್ಳಿ ಎಂದು ಅಧಿಕಾರಿಗಳು ಹೇಳಿದಾಗ ಈ ಕೆಲಸಕ್ಕೆ ಕೈ ಹಾಕಿದ್ದೇವೆ. ಇನ್ನು ಜನಪ್ರತಿನಿಧಿಗಳಿಗೆ ಕೇಳಿದರೆ ನಮಗೆ ಶಾಸಕರ ಅನುದಾನ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು.

Post a comment

No Reviews