2024-09-19 04:57:07

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಡಿ.ಕೆ.ಶಿವಕುಮಾರ್ ಚನ್ನಪಟ್ಟಣದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಹೊರಟಿರೋದು ಅನಗತ್ಯ ಪ್ರಹಸನ – ಸುರೇಶ್ ಕುಮಾರ್ ಲೇವಡಿ

ಬೆಂಗಳೂರು : ಕನಕಪುರದಿಂದ ಆಯ್ಕೆಯಾಗಿ 2028ರ ವರೆಗೆ ಶಾಸಕನಾಗಿ ಮುಂದುವರಿಯುವ ಅವಕಾಶ ಮತ್ತು ಕರ್ತವ್ಯ ಹೊಂದಿರುವ ಡಿ.ಕೆ.ಶಿವಕುಮಾರ್ ಚನ್ನಪಟ್ಟಣದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಹೊರಟಿರುವುದು ಒಂದು ಅನಗತ್ಯ ಪ್ರಹಸನವೇ ಹೌದು ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ ಲೇವಡಿ ಮಾಡಿದ್ದಾರೆ. 

ಚನ್ನಪಟ್ಟಣ ಉಪಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಅವರು ಸ್ಪರ್ಧಿಸುತ್ತಾರೆ ಎಂಬ ಸುದ್ದಿಯ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ರಾಜ್ಯದ ವಿಧಾನಸಭೆಗೆ ಚುನಾವಣೆಗಳು ನಡೆದದ್ದು 2023 ಮೇ ತಿಂಗಳಲ್ಲಿ. ಮೇ 13ರಂದು ಫಲಿತಾಂಶ ಪ್ರಕಟವಾಗಿ ಕಾಂಗ್ರೆಸ್ ಪಕ್ಷ ಬಹುಮತ ಗಳಿಸಿ ಸರ್ಕಾರ ರಚಿಸಲು ಅರ್ಹತೆ ಪಡೆಯಿತು. ಕನಕಪುರ ಕ್ಷೇತ್ರದಿಂದ ಆಯ್ಕೆಯಾದ ಡಿ.ಕೆ. ಶಿವಕುಮಾರ್ ರಾಜ್ಯದ ಉಪ ಮುಖ್ಯಮಂತ್ರಿಯೂ ಆದರು. ಕನಕಪುರ ಕ್ಷೇತ್ರದಿಂದ ಆಯ್ಕೆಯಾಗಿರುವ ಡಿ.ಕೆ.ಶಿವಕುಮಾರ್ ರವರಿಗೆ  ರಾಜ್ಯದ ಇನ್ನುಳಿದ 223 ಕ್ಷೇತ್ರಗಳ ಸದಸ್ಯರಂತೆ 2028 ನೇ ಇಸವಿ ಯವರೆಗೂ ಅವಧಿ ಇದೆ. ಇದೀಗ ಡಿ.ಕೆ. ಶಿವಕುಮಾರ್ ರಾಜಕಾರಣದಲ್ಲಿ ಹೊಸ ನಾಂದಿ ಹಾಡುವ ಸಡಗರದಲ್ಲಿದ್ದಾರೆ ಎಂದು ಟೀಕಿಸಿದ್ದಾರೆ. 

ಕಳೆದ ವರ್ಷ, 2023 ರ ಮೇ ತಿಂಗಳಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಎಚ್ ಡಿ ಕುಮಾರಸ್ವಾಮಿ ಯವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮೊನ್ನೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿ ಕೇಂದ್ರದ ಸಚಿವರೂ ಆಗಿದ್ದಾರೆ. ಹೀಗಾಗಿ ಚನ್ನಪಟ್ಟಣ ಕ್ಷೇತ್ರದ ತನ್ನ ಶಾಸಕ ಸ್ಥಾನಕ್ಕೆ ಕುಮಾರಸ್ವಾಮಿ ಅವರು ರಾಜೀನಾಮೆ ಕೊಟ್ಟಿದ್ದಾರೆ. ಈಗ ಶಾಸಕ ಸ್ಥಾನ  ಖಾಲಿಯಾಗಿರುವ ಚನ್ನಪಟ್ಟಣ ಕ್ಷೇತ್ರದಿಂದ ಉಪಚುನಾವಣೆ ಅಗತ್ಯವಾಗಿದೆ. ಇತಿಹಾಸದಲ್ಲಿ  ಓರ್ವ ವ್ಯಕ್ತಿ ತನ್ನ ರಾಜಧಾನಿಯನ್ನು ದೆಹಲಿಯಿಂದ ಸಾವಿರಾರು ಮೈಲಿ ದೂರದ ಮಹಾರಾಷ್ಟ್ರದಲ್ಲಿನ ದೌಲತಾಬಾದಿಗೆ ಬದಲಾಯಿಸಿದ್ದ.  ನಂತರ ಮತ್ತೆ ದೌಲತಾಬಾದಿಂದ ದೆಹಲಿಗೆ ವಾಪಸ್ಸು ರಾಜಧಾನಿಯನ್ನು ತಂದ. ಇತಿಹಾಸದಲ್ಲಿ ಈ ವಿಲಕ್ಷಣ ವ್ಯಕ್ತಿ ಹೆಸರು ಯಾವಾಗಲೂ ನೆನಪಿರುತ್ತದೆ. ಇದನ್ನೇ ತುಘಲಕ್ ದರ್ಬಾರ್ ಅನ್ನುವುದು. ಇದೀಗ ಕನಕಪುರದಿಂದ ಆಯ್ಕೆಯಾಗಿ 2028ರ ವರೆಗೆ ಶಾಸಕನಾಗಿ ಮುಂದುವರಿಯುವ ಅವಕಾಶ ಮತ್ತು ಕರ್ತವ್ಯ ಹೊಂದಿರುವ ಡಿ.ಕೆ. ಶಿವಕುಮಾರ್ ಚನ್ನಪಟ್ಟಣದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಹೊರಟಿರುವುದು ಒಂದು ಅನಗತ್ಯ ಪ್ರಹಸನವೇ ಹೌದು.  ಮಾಧ್ಯಮಗಳಲ್ಲಿ ಕೇಳಿ ಬಂದಂತೆ ಚನ್ನಪಟ್ಟಣದಿಂದ ಸ್ಪರ್ಧಿಸಿ ತಾನು ಗೆದ್ದು, ಈಗಾಗಲೇ ಆಯ್ಕೆ ಯಾಗಿರುವ  ಕನಕಪುರ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅಲ್ಲಿಂದ ಮೊನ್ನೆ ಲೋಕಸಭಾ ಚುನಾವಣೆಯಲ್ಲಿ ಪರಾಜಿತರಾದ ತನ್ನ ಸಹೋದರ ಡಿ.ಕೆ. ಸುರೇಶ್ ಗೆ ಸ್ಪರ್ಧಿಸುವಂತೆ ಮಾಡಿ ಅವರನ್ನು ಗೆಲ್ಲಿಸಿ  ಶಾಸಕರನ್ನಾಗಿ ಮಾಡುವ ಮಹದೋದ್ದೇಶ ಡಿಕೆ ಶಿವಕುಮಾರ್ ಅವರದಂತೆ.  ಇದಕ್ಕೆ ಏನು ಹೇಳಬೇಕು?  ಸಾರ್ವಜನಿಕರ ಹಣ,  ರಾಷ್ಟ್ರದ ಸಂಪತ್ತು ಹೇಗೆ ವೈಯಕ್ತಿಕ ಪ್ರತಿಷ್ಠೆಗಾಗಿ ವೆಚ್ಚವಾಗುತ್ತದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ. ಡಿ.ಕೆ.ಶಿವಕುಮಾರ್ ರವರ ಈ ನಡೆ ವಿವೇಚನೆ ಮತ್ತು ವಿವೇಕದಿಂದ ಕೂಡಿದ ಅತಿರೇಕದ ನಡೆ ಎಂದೆನಿಸದು. ರಾಹುಲ್ ಗಾಂಧಿಯವರು ಇದಕ್ಕೆ ಒಪ್ಪುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.

Post a comment

No Reviews