
ಹಾವೇರಿ: ಜಿಲ್ಲಾದ್ಯಂತ ಭಾನುವಾರ ಸುರಿದ ಭಾರೀ ಮಳೆ ಜನರ ನಿದ್ದೆಗೆಡಿಸಿದೆ. ಮನೆ ತುಂಬಾ ಮಳೆ ನೀರು ತುಂಬಿದ್ದು, ಹೊರಹಾಕುವುದೇ ದೊಡ್ಡ ಸವಾಲಾಗಿದೆ. ಈ ಧಾರಾಕಾರ ಮಳೆಯಿಂದ ಹಿರೇಕೆರೂರು ತಾಲೂಕಿನ ಬಸರಿಹಳ್ಳಿ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದೆ.
ಮಳೆ ಶುರುವಾದಾಗಿನಿಂದ ಮನೆಯೊಳಗಿನಿಂದ ಮಳೆ ನೀರನ್ನು ಹೊರಗೆ ಹಾಕುವುದೇ ಗ್ರಾಮಸ್ಥರಿಗೆ ಕೆಲಸವಾಗಿದೆ. ರಸ್ತೆಗಳು ಕೆರೆಗಳಂತಾಗಿದ್ದು, ಜನರು ಆತಂಕದಲ್ಲಿ ರಾತ್ರಿ ಕಳೆದಿದ್ದಾರೆ.
ಮಳೆಯ ಜೊತೆಗೆ ಸಿಡಿಲು ಗುಡುಗು ಪ್ರಾರಂಭವಾಗಿದ್ದು, ರಾಣೆಬೆನ್ನೂರು ತಾಲೂಕಿನ ನೂಕಾಪುರದಲ್ಲಿ ಸಿಡಿಲು ಬಡೆದು ಹೋರಿ ಸಾವನ್ನಪ್ಪಿದೆ. ಸುಮಾರು 70 ಸಾವಿರ ರೂಪಾಯಿಗೆ ಬೆಲೆ ಬಾಳುವ ಈ ಹೋರಿ ಹಾಲೇಶ್ ಕುಂಬಾರಿ ಎಂಬ ರೈತನಿಗೆ ಸೇರಿದ್ದು, ಈ ಸಾವಿನಿಂದ ದೊಡ್ಡ ನಷ್ಟವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಮಳೆಯಿಂದ ರೈತರು ರಾಶಿ ಮಾಡಿದ್ದ ಕಣಕ್ಕೂ ನುಗ್ಗಿದ ನೀರು ಲಕ್ಷಾಂತರ ರೂ. ಬೆಳೆ ಹಾನಿ ಮಾಡಿದೆ. ಕೆಲವೆಡೆ ಜಮೀನಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಮೆಕ್ಕೆಜೋಳ ಬೆಳೆ ತೆಂಗು, ಅಡಕೆ, ಮೆಕ್ಕೆಜೋಳ, ಶೇಂಗಾ, ಹತ್ತಿ, ಸೋಯಾಬಿನ್ ಸೇರಿದಂತೆ ವಿವಿಧ ಬೆಳೆಗಳು ನಾಶವಾಗಿವೆ.
Poll (Public Option)

Post a comment
Log in to write reviews