
ಕೊಯಮತ್ತೂರು(ತಮಿಳುನಾಡು): ಇತ್ತೀಚಿಗೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ವಡಕನ್ಸೇರಿಯಲ್ಲಿರುವ ಖಾಸಗಿ ಮದುವೆ ಮಂಟಪದಲ್ಲಿ ಮುಸ್ಲಿಂ ಸಮುದಾಯದ ವಿವಾಹ ಸಮಾರಂಭವನ್ನು ಆಯೋಜಿಸಲಾಗಿತ್ತು. ಇಲ್ಲಿ ತೃತೀಯಲಿಂಗಿ ಕನಿಕಾ ಎಂಬವರು ತಮ್ಮ ತಮಿಳುನಾಡಿನ ಕೊಯಮತ್ತೂರಿನ ತಂಡದೊಂದಿಗೆ ಕುರ್ತಾ, ಲುಂಗಿ ಧರಿಸಿ ಉತ್ಸಾಹದಿಂದ ರುಚಿಕಟ್ಟಾದ ಬಿರಿಯಾನಿ ಸಿದ್ಧಪಡಿಸಿ ಅತಿಥಿಗಳಿಗೆ ಉಣಬಡಿಸಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಕನಿಕಾರವರು " ಅಡುಗೆ ಕಲಿತ ನಂತರ ನಾವು ಶ್ರೀಮತಿ ಸೆಲ್ವಿ ಮತ್ತು ಸಾರೋ ಅಮ್ಮನವರಿಂದ ಕೊಯಮತ್ತೂರಿನಲ್ಲಿ ಮಾತ್ರವಲ್ಲದೆ ಕೇರಳದಲ್ಲೂ ಬಿರಿಯಾನಿ ತಯಾರಿಸುತ್ತಿದ್ದೇವೆ. ಅಡುಗೆ ಕಲಿಸುವ ಮೂಲಕ ನಮ್ಮಲ್ಲಿ ನನ್ನಂತಹ ಟ್ರಾನ್ಸ್ಜೆಂಡರ್ಗಳಿಗೆ ಸೆಲ್ವಿ ಅಮ್ಮ ಆತ್ಮಸ್ಥೈರ್ಯ ತುಂಬಿದ್ದಾರೆ" ಎಂದರು.
ನಮ್ಮ ರಾವುತರ್ ಬಿರಿಯಾನಿ ಕೊಯಮತ್ತೂರಿನಲ್ಲಿ ಜನಪ್ರಿಯ. ನಾನು ಕಳೆದ 15 ವರ್ಷಗಳಿಂದ ಅಡುಗೆ ಮಾಡುತ್ತಿದ್ದೇನೆ. ನಮಗೆ ಕೊಯಮತ್ತೂರಿಗಿಂತ ಕೇರಳದಲ್ಲಿ ಹೆಚ್ಚಿನ ಗ್ರಾಹಕರಿದ್ದಾರೆ. ನಮ್ಮ 40 ಜನರ ತಂಡ ಕಳೆದ ವಾರ ಹತ್ತು ಸಾವಿರ ಜನರಿಗೆ ಬಿರಿಯಾನಿ ತಯಾರಿಸಿತು. ಚಹಾ ಮಾಡುವುದು ಮೊದಲು ಮನೆಯಲ್ಲಿ ಹೇಗೆಂದೂ ತಿಳಿದಿರಲಿಲ್ಲ. ಆದರೆ ಈಗ ನಾವು ಚಹಾ ಜೊತೆಗೆ 10,000 ಜನರಿಗೆ ಅಡುಗೆ ಮಾಡುವ ಸಾಮರ್ಥ್ಯ ಹೊಂದಿದ್ದೇವೆ" ಎಂದು ಸಂತೋಷ ವ್ಯಕ್ತಪಡಿಸಿದರು.
"ಸಮಾಜದಲ್ಲಿ ಎಲ್ಲರಿಗೂ ಊಟ ಹಾಕುವ ಕಾರ್ಯದಲ್ಲಿರುವ ನಮ್ಮನ್ನು ಎಲ್ಲರೂ ಅಮ್ಮ ಎಂದು ಕರೆಯುತ್ತಾರೆ. ನನಗೆ ಅಡುಗೆ ಕಾಯಕದಿಂದ ವಿಶೇಷ ಗೌರವ ಬಂದಿದೆ. ಮನೆ ಹಾಗೂ ಸಮಾಜದಲ್ಲಿ ನಿರ್ಲಕ್ಷಕ್ಕೊಳಗಾಗಿರುವ ತೃತೀಯಲಿಂಗಿಗಳಿಗೆ ಉತ್ತಮ ದಿಶೆ ತೋರಿಸಲು ತಮ್ಮ ಗುಂಪು ಕೆಲಸ ಮಾಡುತ್ತದೆ" ಎಂದು ಕನಿಕಾ ಹೇಳಿದರು.
Poll (Public Option)

Post a comment
Log in to write reviews